Tuesday, July 6, 2021

ದೇ ಜವರೇಗೌಡ

 

ದೇ ಜವರೇಗೌಡ ಅವರು ಬರಹಗಾರರಾಗಿ, ಉಪಕುಲಪತಿಗಳಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.

ದೇ ಜವರೇಗೌಡ ಅವರು ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದ ಬಡ ರೈತ ಕುಟುಂಬದಲ್ಲಿ 1915ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡರು.  ತಾಯಿ ಚೆನ್ನಮ್ಮ.  ತಂದೆ ತಾಯಂದಿರು ತಮ್ಮ ಕಷ್ಟಗಳೇನೇ ಇದ್ದರೂ ಮಗನನ್ನು ಓದಿಸಲೇಬೇಕೆಂಬ ಛಲವನ್ನು ತುಂಬಿಕೊಂಡವರು. ಜವರೇಗೌಡರು ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ಮುಂದೆ ಕುವೆಂಪು ಅವರ ಶಿಷ್ಯರಾಗಿ, ಅವರ ಮಾರ್ಗದರ್ಶನದಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. 


ಜವರೇಗೌಡ ಅವರು ಸ್ವಲ್ಪ ಕಾಲ ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. 1946ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿದರು. ಅನಂತರ ಪ್ರಕಟಣ ಶಾಖೆಯ ಕಾರ್ಯದರ್ಶಿಯಾದರು (1954). 1955ರಲ್ಲಿ ಕನ್ನಡದ ಉಪ-ಪ್ರಾಧ್ಯಾಪಕರಾದರು. ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿಗಳಾದಾಗ ಇವರನ್ನು 1957ರಲ್ಲಿ ವಿಶ್ವವಿದ್ಯಾನಿಲಯದ ಪ್ರಪ್ರಥಮ ಪರೀಕ್ಷೆಗಳ ನಿಯಂತ್ರಣಾಧಿಕಾರಿಯನ್ನಾಗಿ ನೇಮಿಸಿದರು. 1960ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಿಸಲ್ಪಟ್ಟರು. ಅದೇ ವರ್ಷ ಮಾನಸಗಂಗೋತ್ರಿಯ ಕನ್ನಡ ಇಲಾಖೆಗೆ ಕನ್ನಡ ರೀಡರ್ ಆಗಿ ಆಯ್ಕೆಯಾದರು.


ದೇಜಗೌ 1962ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರೂ ಇಲಾಖಾ ಮುಖ್ಯಸ್ಥರೂ ಆದರು. ತಾವು ಪ್ರಾಧ್ಯಾಪಕರಾದ ಮೇಲೆ ತಮ್ಮ ಪ್ರಿಯ ವಿಷಯವಾದ ಜಾನಪದವನ್ನು ಸ್ನಾತಕೋತ್ತರ ತರಗತಿಗಳ ಐಚ್ಫಿಕ ವಿಷಯವಾಗಿ ಸೇರಿಸಿದರು.  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಿದರು.  ಗಂಗೋತ್ರಿಯ ಆವರಣದಲ್ಲಿ ಅದಕ್ಕೆ ಭವ್ಯಕಟ್ಟಡವು ರೂಪಗೊಂಡು, ಸಂಸ್ಥೆಯ ಪ್ರಥಮ ನಿರ್ದೇಶಕರಾದರು (1966). 


ದೇಜಗೌ ಕನ್ನಡದ ಬಹುಮುಖ ಕಾರ್ಯಗಳು ಅಧ್ಯಯನ ಸಂಸ್ಥೆಯಲ್ಲಿ ನಡೆಯುವಂತೆ ಮಾಡಿದರು. ಸರ್ಕಾರಿ ಇಲಾಖೆಯಲ್ಲಿದ್ದ ಕನ್ನಡ ವಿಶ್ವಕೋಶದ ಯೋಜನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ತೆಕ್ಕೆಗೆ ತೆಗೆದುಕೊಂಡು ಉತ್ತಮ ಕೆಲಸಗಾರರನ್ನು ಆರಿಸಿಕೊಂಡು ಆ ಕೆಲಸ ತ್ವರಿತಗತಿಯಿಂದ ಸಾಗುವಂತೆ ಚಾಲನೆ ನೀಡಿದರು. ಜಾನಪದ ವಸ್ತುಸಂಗ್ರಹಾಲಯದ ಕಲ್ಪನೆಯನ್ನು ಕಾರ್ಯಗತಗೊಳಿಸಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ದೊಡ್ಡ ವಸ್ತುಸಂಗ್ರಹಾಲಯವೊಂದು ರೂಪುಗೊಳ್ಳಲು ಕಾರಣಕರ್ತರಾದರು. ಪ್ರಾಚ್ಯವಿದ್ಯಾಸಂಶೋಧನಾಲಯದ ಕನ್ನಡ ಸಂಪಾದನ ವಿಭಾಗವನ್ನು ಪ್ರತ್ಯೇಕಿಸಿ ಅದನ್ನು ಕನ್ನಡ ಅಧ್ಯಯನ ಸಂಸ್ಥೆಯ ತೆಕ್ಕೆಗೆ ತೆಗೆದುಕೊಂಡರು.  ಭಾಷಾಂತರ ವಿಭಾಗವನ್ನು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆರಂಭಿಸಿದರು. ಜಾನಪದ, ಭಾಷಾಂತರ ಮುಂತಾದ ವಿಷಯಗಳಲ್ಲಿ ಡಿಪ್ಲೋಮಾ ತರಗತಿಗಳನ್ನು ಆರಂಭಿಸಿದರು. ಕನ್ನಡ ಉಪಭಾಷಾ ಪರಿವೀಕ್ಷಣೆಯನ್ನು ಕೈಗೊಂಡು ಹಾ.ಮಾ.ನಾಯಕರೊಡನೆ ಕ್ಷೇತ್ರರ್ಕಾಯವನ್ನು ನಾಡಿನ ನಾನಾ ಕಡೆಗಳಲ್ಲಿ ನಡೆಸಿದರು.


ದೇಜಗೌ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳಲ್ಲಿ ಹಲವು ಪ್ರಮುಖ ಪಾತ್ರವಹಿಸಿದ್ದರು. 


ಕರ್ನಾಟಕ ಸರ್ಕಾರ ದೇಜಗೌ ಅವರನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ 1969ರಲ್ಲಿ ಕುಲಪತಿಯನ್ನಾಗಿ ನೇಮಿಸಿತು. ಇವರು ಆರು ವರ್ಷಗಳ ಕಾಲ ಕುಲಪತಿ ಹುದ್ದೆಯಲ್ಲಿದ್ದರು.


ದೇಜಗೌ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲೂ ಕೃತಿರಚನೆ ಮಾಡಿದ್ದು 135ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೋರಾಟದ ಬದುಕು (1968, 1987), ನೆನಪಿನ ಬುತ್ತಿ (1994), ನನ್ನ ಉಪವಾಸದ ಕಥೆ (1994), ಕುಲಪತಿ ದಿನಚರಿ (1973) - ಇವು ಆತ್ಮ ಕಥೆಗಳು. ಇವರ ಭಾಷಾಂತರ ಕೃತಿಗಳಲ್ಲಿ ಮುಖ್ಯವಾದವು: ನೆನಪು ಕಹಿಯಲ್ಲ (ಕೃಷ್ಣ ಹತೀಸಿಂಗ್, 1949), ಪುನರುತ್ಥಾನ (ಟಾಲ್‍ಸ್ಟಾಯ್, 1965), ಯುದ್ಧ ಮತ್ತು ಶಾಂತಿ (ಟಾಲ್‍ಸ್ಟಾಯ್, 1989), ಅನ್ನಾ ಕರೆನಿನ (ಟಾಲ್‍ಸ್ಟಾಯ್, 1991), ಹಮ್ಮು-ಬಿಮ್ಮು (ಜೇನ್ ಆಸ್ಟಿನ್, 1961). ಟಾಲ್‍ಸ್ಟಾಯ್ ಅವರ ಎರಡು ನಾಟಕಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. ಪುನರುತ್ಥಾನ ಕೃತಿಯ ಅನುವಾದಕ್ಕೆ ಇವರಿಗೆ ಸೋವಿಯತ್‍ಲ್ಯಾಂಡ್ ನೆಹರುಪ್ರಶಸ್ತಿ ಸಂದಿತು (1967). ಇವರು ಸಂಪಾದಿಸಿದ ಪ್ರಮುಖ ಕೃತಿಗಳಲ್ಲಿ ಕಬ್ಬಿಗರ ಕಾವ (1964), ಗಿರಿಜಾ ಕಲ್ಯಾಣ ಮಹಾಪ್ರಬಂಧಂ (1951), ಚಿಕುಪಾಧ್ಯಾಯನ ರುಕ್ಮಾಂಗದ ಚರಿತ್ರೆ (1982), ಜೈಮಿನಿ ಭಾರತ ಸಂಗ್ರಹ (1959), ಧರ್ಮಾಮೃತ ಸಂಗ್ರಹ (1957), ನಳಚರಿತ್ರೆ (1965) ಮುಂತಾದವು ಸೇರಿವೆ. ವಿದೇಶದಲ್ಲಿ ನಾಲ್ಕು ವಾರ (1970), ಪ್ರವಾಸಿಯ ದಿನಚರಿ (1974), ಆಫ್ರಿಕಯಾತ್ರೆ (1975), ಯೇಸು ವಿಭೀಷಣರ ನಾಡಿನಲ್ಲಿ (1978), ಹಚ್ಚ ಹಸುರಿನ ನಾಡಿನಲ್ಲಿ ಮೊದಲಾದವು ಪ್ರವಾಸ ಕಥನಗಳು. ಮೋತಿಲಾಲ್ ನೆಹರು (1961), ರಾಷ್ಟ್ರಕವಿ ಕುವೆಂಪು (1967), ತೀನಂಶ್ರೀ (1970), ಲೋಕನಾಯಕ (1980), ಲೋಕದ ಬೆಳಕು (1983) ಮುಂತಾಗಿ 25ಕ್ಕೂ ಹೆಚ್ಚು ಜೀವನಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ಜಾನಪದ ಅಧ್ಯಯನ (1976), ಜಾನಪದ ಸೌಂದರ್ಯ (1977), ಜನಪದ ಗೀತಾಂಜಲಿ (1978), ಜಾನಪದ ವಾಹಿನಿ (1983) ಮೊದಲಾದವು ಜಾನಪದದ  ಕೃತಿಗಳು. ಫೋಕ್‍ಲೋರ್ ಸೊಸೈಟಿ ಆಫ್ ಸೌತ್ ಇಂಡಿಯನ್ ಲ್ಯಾಂಗ್ವೆಜಸ್‍ನ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಇವರ ಶ್ರೀರಾಮಾಯಣದರ್ಶನಂ ವಚನಚಂದ್ರಿಕೆ ಆ ಮಹಾಕಾವ್ಯದ ಗದ್ಯರೂಪ. ಕುವೆಂಪು ಸಾಹಿತ್ಯ: ಕೆಲವು ಅಧ್ಯಯನಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದೆ. ಶ್ರೀ ಕುವೆಂಪು ಅವರ ದಾಂಪತ್ಯ ದರ್ಶನದ ನಾಲ್ಕು ಮೆಗಾ ಕವನಗಳು, ಕುವೆಂಪು ಅವರ ದರ್ಶನ ಮತ್ತು ಸಂದೇಶ, ರಾಷ್ಟ್ರಕವಿ ಸಂದರ್ಶನ (1984), ಕುವೆಂಪು ಶೈಲಿ, ಕುವೆಂಪು ವಿಶ್ವಮಾನವ ಸಂದೇಶ, ಕುವೆಂಪು ಅವರ ಕೊನೆ ದಿನಗಳು ಮುಂತಾದ ಕುವೆಂಪು ಅವರ ಬಗೆಗಿನ ಅನೇಕ ಕೃತಿಗಳನ್ನು ರಚಿಸಿದ್ದಾರೆ.  ಕನ್ನಡಿಗರೇ ಎಚ್ಚರಗೊಳ್ಳಿ, ಕನ್ನಡಕ್ಕಾಗಿ ಕೈ ಎತ್ತು, ಕನ್ನಡಕ್ಕೆ ನಮನ, ರಾಷ್ಟ್ರೀಯ ಮೂಲಭೂತ ಸಮಸ್ಯೆ ಮುಂತಾದವು ಕನ್ನಡ ಕುರಿತಾದ ಕಾಳಜಿ ಕೃತಿಗಳು. ಕಡುಗಲಿ ಕುಮಾರರಾಮ ಇವರು ರಚಿಸಿದ ಐತಿಹಾಸಿಕ ಕಾದಂಬರಿ. ಕಲ್ಚರ್, ಎಜ್ಯುಕೇಷನ್ ಅಂಡ್ ಸೊಸೈಟಿ (1974), ಪೊಯೆಮ್ಸ್ ಆಫ್ ಕುವೆಂಪು (1988) ಇವರು ಇತರರೊಡನೆ ಸೇರಿ ರೂಪಿಸಿದ ಇಂಗ್ಲಿಷ್ ಕೃತಿಗಳು. ದೇಜಗೌ ಹಲವು ವರ್ಷ ಪ್ರಬುದ್ಧ ಕರ್ಣಾಟಕದ ಸಂಪಾದಕರಾಗಿದ್ದರು.


ದೇಜಗೌ ಬೆಂಗಳೂರಿನಲ್ಲಿ ನಡೆದ 47ನೆಯ ಕನ್ನಡ ಸಾಹಿತ್ಯ ಸಮ್ಮೇಳನದ (1970) ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟೊರೇಟ್ ನೀಡಿ ಗೌರವಿಸಿತು. ಇವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಲಾಗಿತ್ತು.  ಕುರುಕ್ಷೇತ್ರದಲ್ಲಿ ಜರುಗಿದ ಅಖಿಲ ಭಾರತ ಪ್ರಾಚ್ಯ ವಿದ್ಯಾಲಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ದೇಜಗೌ ಅವರಿಗೆ ತಿರುವಾಂಕೂರಿನ ದ್ರಾವಿಡ ಭಾಷಾವಿಜ್ಞಾನ ಸಂಸ್ಥೆಯ ಸೀನಿಯರ್ ಫೆಲೋ ಗೌರವ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ' ಗೌರವ, 2001ರಲ್ಲಿ ಪದ್ಮಶ್ರೀ, 2008ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. 


ಶತಾಯುಷಿಗಳಾಗಿ ಬಾಳಿದ ದೇ ಜವರೇಗೌಡರು 2016ರ ಮೇ 30ರಂದು ನಿಧನರಾದರು.


(ಆಕರ: 'ಕನ್ನಡ ಸಂಪದ')


Monday, July 5, 2021

ಮೊಗಳ್ಳಿ ಗಣೇಶ್

ಶ್ರೀ ಮೊಗಳ್ಳಿ ಗಣೇಶ್ ಕನ್ನಡದ ಮುಖ್ಯ ಕಥೆಗಾರರಲ್ಲಿ ಒಬ್ಬರು.


ಮೊಗಳ್ಳಿ ಗಣೇಶ್ 1963ರ ಜುಲೈ 1 ರಂದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನ ಹಳ್ಳಿಯಲ್ಲಿ  ಜನಿಸಿದರು.  ಒಮ್ಮೆ ತೊಂಬತ್ತರ ದಶಕದಲ್ಲಿ ಯುವ ವಯಸ್ಸಿನ  ಮೊಗಳ್ಳಿ ಗಣೇಶ್ ಸಾಹಿತ್ಯದಲ್ಲಿ ಗ್ರಾಮೀಣ ಪ್ರದೇಶದ ಮಣ್ಣಿನ ವಾಸನೆಯ ಕುರಿತಾಗಿ ಹೇಳಿದ್ದ ಪ್ರೀತಿಯ ಮಾತುಗಳು  ಇಂದೂ ನನ್ನಲ್ಲಿ ಅಣುರಣಿಸುತ್ತಿದೆ.  ಅಂತಹ ನೇರ  ಸ್ಪಷ್ಟ ಮಾತುಗಾರಿಕೆ ಮತ್ತು ಬರಹಗಳು ಅವರಲ್ಲಿ ಪ್ರಾರಂಭದಲ್ಲೇ ಮೂಡಿತ್ತು.


ಮೊಗಳ್ಳಿ ಗಣೇಶರು ಓದಿದ್ದು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಅರ್ಥಶಾಸ್ತ್ರ.  ಆದರೆ ಅವರಲ್ಲಿ ಹರಿಯುತ್ತಿರುವುದು ಮಣ್ಣಿನ ವಾಸನೆಯುಕ್ತ ಸಾಹಿತ್ಯಪ್ರೀತಿ. ಅವರ ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿದ್ದವು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಮೊಗಳ್ಳಿ ಗಣೇಶರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.  


ಮೊಗಳ್ಳಿ ಗಣೇಶ್ ಡಾಕ್ಟರೇಟ್ ಸಾಧನೆಯನ್ನೂ ಮಾಡಿದ್ದಾರೆ.   ‘ಆದಿಮ’ ಎಂದು ಪ್ರಕಟಗೊಂಡ ಈ ಸಂಶೋಧನಾ ಕೃತಿಯ ಬಗ್ಗೆ ಎಂ. ಎಂ. ಕಲಬುರ್ಗಿ ಹೇಳುತ್ತಾರೆ:  “ಆದಿಮ” ಓದಿದೆ”.  “ಒಡಲ ನೂಲಿನಿಂದ ಜೇಡ ನೇಯುವಂತೆ ಜಾಲ” ಎಂಬ ಬೇಂದ್ರೆ ಮಾತು ನೆನಪಾಯಿತು.  “ಕನ್ನಡ ಪಿಎಚ್.ಡಿ ಪ್ರಬಂಧ ರಚನೆಯ ಇತಿಹಾಸದಲ್ಲಿ ಬಾಹ್ಯ ಆಕರ ನಿರಾಕರಣೆಯ ಈ ಬರವಣಿಗೆ ಹೊಸ ಪ್ರಯೋಗ.  ಇಲ್ಲಿ ನಿಮ್ಮ ಆಶಯ ಕಣ್ಣಿಗೆ ಕಾಣುತ್ತದೆ, ಮನಕ್ಕೆ ಮುಟ್ಟುತ್ತದೆ.  ಕೈಗೆ ಸಿಗುವುದಿಲ್ಲ – ಬಯಲದೇಹಿ ಅಲ್ಲಮನಂತೆ” ಎಂದು.  


ಮೊಗಳ್ಳಿ ಗಣೇಶ್ ಅವರು ಮೊದಲು ಬರೆಯಲು ಪ್ರಾರಂಭಿಸಿದ್ದು ಕವಿತೆಗಳನ್ನು.  ಕಥೆಯಲ್ಲಿ ಹೇಳಿಕೊಳ್ಳಲಾಗದ ಸುಖದುಃಖಗಳನ್ನು ಕವಿತೆಯಲ್ಲಿ ಹೇಳುವುದು ಹೆಚ್ಚು ಸಲೀಸು, ಆಪ್ತ ಹಾಗೂ ಸುಖಕರ ಎನ್ನುವುದು ಅವರ ಮಾತು. ತೀರ ಸಂಕಟವೆನಿಸಿದಾಗ ಕವಿತೆಯೇ ತೀರಾ ಹತ್ತಿರದ ಸಂಬಂಧಿಯಂತೆ ಕಾಣಿಸುತ್ತದೆ, ನನ್ನನ್ನು ನಾನೇ ಸಂತೈಸಿಕೊಳ್ಳಲು ಕಾವ್ಯಕ್ಕಿಂತ ಒಳ್ಳೆಯ ಉಪಕರಣ ಬೇರೇನಿದೆ ಎಂದು ಅವರು ಹೇಳುತ್ತಾರೆ.  ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಅವರ ಕಾವ್ಯ ಸಂಕಲನಗಳು. 


ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನಗಳು.   ತೊಟ್ಟಿಲು, ಕಿರೀಟ  ಅವರ ಕಾದಂಬರಿಗಳು.  ‘ಬೇರು’ ಎಂಬ 986 ಅವರ ಬೃಹತ್ ಕಾದಂಬರಿ ತಯಾರಾಗಿದೆ.   ‘ಕಥನ’ ಅವರ ಪ್ರಬಂಧ ಸಂಕಲನ.  ‘ಸೊಲ್ಲು’, ‘ವಿಮರ್ಶೆ’, ‘ಶಂಬಾ ಭಾಷಿಕ ಸಂಶೋಧನೆ’, ‘ತಕರಾರು’ ಅವರ ವಿಮರ್ಶಾ ಕೃತಿಗಳು.  ‘ವಿಶ್ಲೇಷಣೆ’ ಎಂಬ ಅಂಕಣ ಕೂಡಾ ಜನಪ್ರಿಯ. ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಅವರ ಚಿಂತನ ಕೃತಿ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಹೋಗಿವೆ.


ಮೊಗಳ್ಳಿ ಗಣೇಶ್ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ರಾಜಕುಮಾರ್ ಹೆಸರಿನಲ್ಲಿರುವ  ಅಧ್ಯಯನ ಪೀಠಕ್ಕೆ ನಿರ್ದೇಶಕರಾದ ಜವಾಬ್ದಾರಿ ಹೊತ್ತಿದ್ದಾರೆ. ಅಲ್ಲಿ 'ಕನ್ನಡ ಸಿನಿಮಾ ವಿಶ್ವಕೋಶ' ಮಾಡುವ ಯೋಜನೆಗೆ ತೊಡಗಿದ್ದಾರೆ. ಹೊರಟಿದ್ದಾರೆ. ತಾರೆಗಳ ಪ್ರಭೆಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ತೆರೆಮರೆಯಲ್ಲಿಯೇ ಉಳಿಯುತ್ತಾರಲ್ಲ ಅಂಥವರ ಬದುಕು ಹಾಗೂ ಸಾಧನೆ ಬಗೆಗಿನ ಪುಸ್ತಕ ಮಾಲಿಕೆಯ 'ಆತ್ಮಕಥನ ಮಂಟಪ' ಎಂಬ ಯೋಜನೆಗೂ ಕೈ ಇಟ್ಟಿದ್ದಾರೆ.



‘ದೇವರ ದಾರಿ’ ಕೃತಿಗೆ ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ‘ತಕರಾರು’ ವಿಮರ್ಶೆಗೆ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಮೊಗಳ್ಳಿ ಗಣೇಶ್ ಅವರಿಗೆ ಸಂದಿವೆ. ಸರಳ ಸ್ನೇಹ ಜೀವಿ ವಿಶಿಷ್ಟ ಸಾಧನೆಗಳ ಶ್ರೀ ಮೊಗಳ್ಳಿ ಗಣೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


(ಮಾಹಿತಿ ಆಕರ : 'ಕನ್ನಡ ಸಂಪದ')

ವಚನ ಪಿತಾಮಹ ಫ. ಗು. ಹಳಕಟ್ಟಿ

ಒಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ಬಿಜಾಪುರಕ್ಕೆ ಬಂದಿಳಿದಾಗ  ಒಬ್ಬರು ಕೇಳಿದರಂತೆ – “ಇತಿಹಾಸ ಪ್ರಸಿದ್ಧವಾದ ಗೋಳಗುಮ್ಮಟವನ್ನು ನೋಡುವಿರಾ?”  ಅದಕ್ಕೆ ನಕ್ಕು  ಬಿ.ಎಂ.ಶ್ರೀ ಅವರು ಉತ್ತರಿಸಿದರಂತೆ “ಮೊದಲು ನಾನು  ವಚನಗುಮ್ಮಟವನ್ನು ನೋಡಬೇಕಾಗಿದೆ” ಎಂದು.  ಆ ವಚನ ಗುಮ್ಮಟವೇ ವಚನ ಪಿತಾಮಹರೆಂದು ಖ್ಯಾತನಾಮರಾದ ರಾವಬಹದ್ಧೂರ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು.  


ಫ.ಗು.ಹಳಕಟ್ಟಿ  1880ರ ಜುಲೈ 2 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ದಾನಾದೇವಿ.  ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ಶಿಕ್ಷಕರಾಗಿದ್ದ ತಂದೆ ಸಾಹಿತಿಗಳಾಗಿ ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ  ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ "ವಾಗ್ಭೂಷಣ"ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು. 


ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ 1896ರಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದವರಲ್ಲಿ ತಮ್ಮ ಭಾಷೆಯ ಬಗ್ಗೆ ಇದ್ದ  ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು.


1901ರಲ್ಲಿ ಬಿ.ಎ. ಪದವಿ ಪಡೆದ ಹಳಕಟ್ಟಿಯವರು 1904ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲಿವೃತ್ತಿ ಪ್ರಾರಂಭಿಸಿದರಾದರೂ ಕೆಲವು ತಿಂಗಳುಗಳಲ್ಲೇ ಕಾರಣಾಂತರಗಳಿಂದ ಬೆಳಗಾವಿಯಿಂದ ಬಿಜಾಪುರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲಿಂದೀಚೆಗೆ ಬಿಜಾಪುರವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು. ಒಂದೆಡೆ ವಕೀಲಿ ವೃತ್ತಿ, ಮತ್ತೊಂದೆಡೆ ನಾಡು-ನುಡಿಯ ಪ್ರಗತಿಗಾಗಿ ಹಲವು ಹತ್ತು ರೀತಿಯಲ್ಲಿ ದುಡಿಮೆ. ಇದು ಅವರ ನಿತ್ಯ ಕಾಯಕವಾಗಿತ್ತು. ಅದೇ ಸಮಯದಲ್ಲಿ ಚಿಕ್ಕೋಡಿಯ ತಮ್ಮಣ್ಣನವರ ಪುತ್ರಿ ಭಾಗೀರಥಿದೇವಿಯೊಡನೆ ವಿವಾಹವಾಗಿ ಗೃಹಸ್ಥಾಶ್ರಮ ಪ್ರವೇಶಿಸಿದರಾದರೂ ಸಾರ್ವಜನಿಕ ಬದುಕಿನ ಸೇವಾಹಾದಿಯಿಂದ ಹಿಂದೆ ಸರಿಯದೆ ಮತ್ತಷ್ಟು ದೃಢವಾಗಿ ಮುನ್ನುಗ್ಗಿದರು. ಅಪಾರ ಕಾನೂನು ಜ್ಞಾನದಿಂದಾಗಿ ಆ ಭಾಗದ ಪ್ರಸಿದ್ಧ ವಕೀಲರಾಗಿ ರೂಪುಗೊಂಡ ಇವರು ತಮ್ಮ ಜನಪ್ರಿಯತೆಯಿಂದಲೇ 1905ರಲ್ಲಿ ಬಿಜಾಪುರ ನಗರಸಭೆಯ ಶಾಲಾ ಕಾರ್ಯನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ ಮತ್ತು ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.  ಆ ಸಮಯದಲ್ಲಿ  ಕನ್ನಡ ಶಾಲೆಗಳ ಅಭ್ಯುದಯಕ್ಕಾಗಿ, ಗ್ರಾಮೀಣ ಜನರ ಉನ್ನತಿಗಾಗಿ ಎಂದೂ ಮರೆಯದಂಥ ಜನಸೇವೆಗೈದ ಹಿರಿಮೆ ಇವರದು. ಅಂತೆಯೇ 1923ರಲ್ಲಿ ಸರ್ಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರಲ್ಲದೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿಯೂ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಮುಂಬಯಿ ವಿಧಾನಪರಿಷತ್ತಿನ ಸದಸ್ಯರಾಗಿ ತಮ್ಮ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು, ಪುಷ್ಠಿಗೊಳಿಸಲು, ಒಟ್ಟಾರೆ ಸಮೃದ್ಧವಾಗಿ ಕನ್ನಡ ಕಟ್ಟಲು ಪ್ರಾಮಾಣಿಕವಾಗಿ ದುಡಿದು ಅಜರಾಮರ ಕೆಲಸ ಮಾಡಿದ್ದಾರೆ.


ಕನ್ನಡವನ್ನು ಉಸಿರಾಗಿಸಿಕೊಂಡಿದ್ದಷ್ಟೇ ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈಯದ ಆಲಯಗಳಿಲ್ಲ, ಸಂಶೋಧನೆ ನಡೆಸದ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನರಾಶಿಯನ್ನು 1920ರಲ್ಲಿ ಬಿಜಾಪುರದಲ್ಲಿ ಪ್ರದರ್ಶಿಸಿ ಇದರ ಮೌಲ್ಯವನ್ನು ಇಂಚಿಂಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು. ಆ ಕಾಲದಲ್ಲಿದು ಶರಣರ ನಾಡಿನಲ್ಲಿ ಭಾರಿ ಸಂಚಲನ ಉಂಟುಮಾಡಿತ್ತು. ಆ ನಂತರ ಹಸ್ತಪ್ರತಿ ರೂಪದಲ್ಲಿದ್ದ ಈ ವಚನಸಂಪತ್ತನ್ನು ಸಂಪಾದಿಸಿ ಮುದ್ರಿಸಿ ಪುಸ್ತಕರೂಪದಲ್ಲಿ ಹೊರತರಲು ಮುಂದಾದ ಇವರು ಇದಕ್ಕಾಗಿ 1925ರಲ್ಲಿ ತಮ್ಮ ಸ್ವಂತಮನೆ ಮಾರಿ "ಹಿತಚಿಂತಕ ಮುದ್ರಣಾಲಯ"ವನ್ನು ಪ್ರಾರಂಭಿಸಿದರು. ಅಲ್ಲಿಂದ ವಚನ ಸಾಹಿತ್ಯ ಕೃತಿಗಳ ಸುರಿಮಳೆಯೇ ಶುರುವಾಯಿತು. ನಿಜಕ್ಕೂ ಆಗ ಹಳಕಟ್ಟಿಯವರಿಂದ ವಚನಕ್ರಾಂತಿಯೇ ನಡೆದಿತ್ತು. ಇವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನಸಂಕಲನದ ಕೃತಿಯೂ ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳೇ ಆಗಿವೆ. ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತೆಕಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು ಮಾತ್ರ.  ಫ. ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು.  ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ.


ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ "ವಚನ ಸಾಹಿತ್ಯ ಸಾರ"ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ 1923 ರಿಂದ 1939ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು 175ಕ್ಕೂ ಹೆಚ್ಚೆಂದರೆ  ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು ಯಾರು ಬೇಕಾದರೂ ಊಹಿಸಬಹುದು.   ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ..... ಮುಂತಾದವುಗಳು ಇವರ ಪ್ರಮುಖ ಕೃತಿಗಳು.


ಪತ್ರಿಕೋದ್ಯಮದಲ್ಲೂ ಬಹಳ ಆಸಕ್ತಿ ಹೊಂದಿದ್ದ ಹಳಕಟ್ಟಿಯವರು 1926ರಲ್ಲಿ ಸಂಶೋಧನೆಗಾಗಿ ಮೀಸಲಾದ ‘ಶಿವಾನುಭವ’ ಪತ್ರಿಕೆ ಪ್ರಾರಂಭಿಸಿದರು. ಇದನ್ನು ಸತತವಾಗಿ ನಡೆಸಿಕೊಂಡು ಬಂದ ಇವರು 1951ರಲ್ಲಿ ಇದರ ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಹಾಗೆಯೇ 1927ರಲ್ಲಿ ‘ನವ ಕರ್ನಾಟಕ’ ಎಂಬ ವಾರಪತ್ರಿಕೆಯನ್ನೂ ಸಹ ಆರಂಭಿಸಿದ್ದರು. ಈ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕ ಹಾಗೂ ಮುದ್ರಕರಾಗಿ ಹಳಕಟ್ಟಿಯವರ ಪತ್ರಿಕಾರಂಗದ ಸಾಧನೆ ಕೂಡ ಗುರುತರವಾದದ್ದೇ.


ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು 1910ರಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯುತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ)ವನ್ನು ಮತ್ತು 1912ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ್ದರಲ್ಲದೆ ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜಾಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ  ಇವರು ಮಹತ್ತರ ಪಾತ್ರ ವಹಿಸಿದ್ದರು.


ಇಂಥ ಪ್ರಚಂಡ ಸಾಧಕ ಹಳಕಟ್ಟಿಯವರು 1964ರ ಜೂನ್ 27ರಂದು ನಾಡನ್ನು ಬಿಟ್ಟು ಅಗಲಿದರೂ ಇವರು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು ಎಲ್ಲಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯ ಕ್ಷೇತ್ರ ಇವರ ಹೆಸರನ್ನು ಅಜರಾಮರಗೊಳಿಸಿವೆ. ಇವರು ಸಂಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಹಲವು ವರ್ಷಗಳ ಹಿಂದೆ  ಮೂವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಹದಿನೈದು ಸಂಪುಟಗಳಲ್ಲಿ ಪ್ರಕಟಿಸಿದೆ ಎಂದರೆ ಯಾರಿಗಾದರೂ ಅರ್ಥವಾಗುತ್ತದೆ. ಹಳಕಟ್ಟಿಯವರು ಸಂಸ್ಥಾಪಿಸಿದ್ದ ಸಂಸ್ಥೆಯೊಂದರ ಬೆಳವಣಿಗೆಯ ಪರಿ ಎಂಥಾದ್ದೆಂದು!


1920ರಲ್ಲಿ ಮುಂಬಯಿಯ ವಿಧಾನ ಪರಿಷತ್ತಿನ ಸದಸ್ಯತ್ವ, 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1928ರಲ್ಲಿ ಜರುಗಿದ 3ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ,  1931ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, 1933ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ,  1956ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮುಂತಾದವು ಇವರ ಸೇವೆಗೆ ಸಂದ ಗೌರವ ಪುರಸ್ಕಾರಗಳು.


ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್ಗೆ ಅನುವಾದಿಸಿ ‘ಇಂಡಿಯನ್ ಆಂಟಿಕ್ವರಿ’ಯಲ್ಲಿ ಪ್ರಕಟಗೊಳಿಸಿದರು.  ಅಷ್ಟೇ ಅಲ್ಲ ವಚನಗಳ ಗಾಯನಕ್ಕೂ ವ್ಯವಸ್ಥೆ ಮಾಡಿಸಿದರಲ್ಲದೆ ಶ್ರೇಷ್ಠ ಸಂಗೀತಕಾರರನ್ನು ವಚನ ಗಾಯನ ರೆಕಾರ್ಡಿಂಗ್ ಗಾಗಿ ಮುಂಬಯಿಯವರೆಗೆ ಕಳುಹಿಸಿದರು.  ಹೀಗೆ ವಚನ ಸಾಹಿತ್ಯದ ಪ್ರಸಾರ ಕಾರ್ಯವನ್ನು ಕೈಗೊಂಡ ಅವರನ್ನು ’ವಚನ ಪಿತಾಮಹ’ ಎಂದು ಕರೆದಿರುವುದು ಉಚಿತವಾಗಿದೆ.  


(ಆಧಾರ:  ಫ. ಗು. ಹಳಕಟ್ಟಿ ಅವರ ಕುರಿತ ಜಿ. ಎಸ್. ಸಿದ್ಧಲಿಂಗಯ್ಯ ಅವರ ಲೇಖನ ಮತ್ತು ಪತ್ರಕರ್ತ ಬನ್ನೂರು ಕೆ. ರಾಜು ಅವರ ಲೇಖನ)


(ಆಕರ: 'ಕನ್ನಡ ಸಂಪದ')



ಶ್ರೀ ಶಿಶುನಾಳ ಶರೀಫ್ ಸಾಹೇಬ

೧೯ ನೇ ಶತಮಾನದಲ್ಲಿ ಆಗಿಹೋದ ಕನ್ನಡದ ಕಬೀರನೆಂದೇ ಹೆಸರುವಾಸಿಯಾದ, ಸಂತ ಶರಣ ಅನುಭಾವಿ ಕವಿ "ಶ್ರೀ ಶಿಶುನಾಳ ಶರೀಫ್ ಸಾಹೇಬ"ರು ಧಾರವಾಡ ಜಿಲ್ಲೆ ಶಿಗ್ಗಾಂವ ತಾಲೂಕು ಶಿಶುವಿನಾಳ ಗ್ರಾಮದಲ್ಲಿ  ದಿನಾಂಕ ೩-೭-೧೮೧೯ ರಲ್ಲಿ  ತಂದೆ ಹಜರತ್ ಇಮಾಮಸಾಹೇಬ್ ತಾಯಿ ಹಜ್ಜುಮಾ ಇವರ ಉದರದಿಂದ ಜನಿಸಿ ಬರುತ್ತಾರೆ.  ಇವರಿಗೆ ”ಮೊಹಮ್ಮದ್ ಶರೀಫ್” ಎಂದು ಹುಲಗೂರು ”ಹಜರೇಶಾ ಖಾದ್ರಿಯವರು ನಾಮಕರಣವನ್ನು  ಮಾಡುತ್ತಾರೆ. ಚರಮೂರ್ತಿಗಳಾದ ಗೋವಿಂದ ಭಟ್ಟರು ಇವರ ಗುರುಗಳು.


      ಇಂದು ಶಿಶುನಾಳ ಶರೀಫ್ ರ ಜನನವಾದ ದಿನ. ಅವರು ಮುಖ್ಯವಾಗಿ ಜಾತಿಭೇದವನ್ನು ಜಾಡಿಸಿ ಒದ್ದು ಹಿಂದೂ-ಮುಸ್ಲಿಂ ಭಾವೈಕ್ಯತೆಗಾಗಿ ತುಂಬಾ ಶ್ರಮಿಸಿದವರು. ಅವರ ಆಡು ಭಾಷೆಯಿಂದಲೇ ತತ್ವದ ಭೋದೆಗಳನ್ನು ಜನಸಾಮಾನ್ಯರಿಗೆ ಮನ ಮುಟ್ಟುವಂತೆ ಪದ್ಯಗಳನ್ನು ರಚಿಸಿ ಹಾಡುತ್ತಿದ್ದರು. ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ಜಾತಿ-ಜಾತಿಗಳ ನಡುವೆ ಇರುವ ದ್ವೇಷವನ್ನು ಅವರ ಪದಗಳಿಂದ ಅಳಿಸಿ ಅಲ್ಲಾಹ್ ಅಲ್ಲಮ ಒಂದೇ, ”ಬೋಕಿಯೊಳಗ ಹುಟ್ಟಿತ್ತು ಈ ಲೋಕವೆಲ್ಲ ಆ ಜಾತಿ ಈ ಜಾತಿ ಎಲ್ಲಿತ್ತೊ” ಎಂದು ಜಾತಿಭೇದದ ವಿಷಯದಲ್ಲಿ ಕೆಂಡದಂತಾಗುತ್ತಿದ್ದರು. 


      ಸರ್ವರಿಗೂ ಇಂತಹ  ಮಹಾನ್ ಸಂತ ಶ್ರೀಶಿಶುನಾಳ ಶರೀಫ್ ರ ಜನುಮದಿನದ ಹಾರ್ದಿಕ ಶುಭಾಶಯಗಳು.



ಗೊರೂರು ರಾಮಸ್ವಾಮಿ ಅಯ್ಯಂಗಾರ್


    ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡದ ಮಹಾನ್ ಸಾಹಿತಿ, ಅಪ್ರತಿಮ ಗಾಂಧೀವಾದಿ, ಸ್ವಾತಂತ್ರ್ಯಹೋರಾಟಗಾರ, ಅಸಮಾನತೆಗಳ ವಿರುದ್ಧ ಹೋರಾಡಿದ ಸಮಾಜ ಸೇವಕ ಮತ್ತು ಕರ್ನಾಟಕ ಏಕೀಕರಣಕ್ಕೆ ದುಡಿದವರು.

    ಗೊರೂರು ರಾಮಸ್ವಾಮಿ ಅಯ್ಯಂಗಾರ್ 1904ರ ಜುಲೈ 4ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು.  ಅವರ ತಂದೆ ಶ್ರೀನಿವಾಸ ಅಯ್ಯಂಗಾರ್. ತಾಯಿ ಲಕ್ಷ್ಮಮ್ಮ.  ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು.  ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು.  ಬಳಿಕ ಮದ್ರಾಸಿನ ‘ಲೋಕಮಿತ್ರ’ ಮತ್ತು ‘ಭಾರತಿ’ ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು.  ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು.   ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು.  ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು.  ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು.  1933ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು.  1942ರ ‘ಚಲೇ ಜಾವ್’ ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು.  ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು.  ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.  ಈ ಅವಧಿಯಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಅವರು ದುಡಿದರು.


    ಗೊರೂರರು ಅನೇಕ ಗೌರವಗಳನ್ನು, ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ 1974ರಲ್ಲಿ ಗೌರವ ಡಿ.ಲಿಟ್ ಪದವಿಯನ್ನು ನೀಡಿತು.  ಅವರು 1982ರಲ್ಲಿ ಸಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.  ಅವರ ‘ಅಮೆರಿಕದಲ್ಲಿ ಗೊರೂರು’ ಗ್ರಂಥಕ್ಕೆ 1980ರ ಕೆಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿತು.


    ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು.  ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ.  ಆದರೂ ಗೊರೂರರ ಸಿದ್ಧಿ, ಪ್ರಸಿದ್ಧಿಗಳಿಗೆ ಮುಖ್ಯವಾದ ಆಧಾರ, ಅವರ ಪ್ರಬಂಧಗಳು.  ಅವು ಹಲವು ದಶಕಗಳಿಂದ ಕನ್ನಡಿಗರಿಗೆ ಶುದ್ಧ ಸಂತೋಷವನ್ನೀಯುತ್ತಿವೆ.  ಇಂದಿಗೂ ಅವುಗಳ ಸ್ವಾರಸ್ಯ ಬತ್ತಿಲ್ಲ.  ತಮ್ಮ ಪ್ರಬಂಧ ಸಾಹಿತ್ಯದಿಂದ ನಾಡನ್ನು ನಗಿಸಿ ನಲಿಸಿದ್ದಾರೆ ಗೊರೂರರು.  ಹಾಗೆ ನೋಡಿದರೆ ನಮ್ಮ ಜನತೆಗೆ ನಗೆಯನ್ನು ಕಲಿಸಿದವರಲ್ಲಿ ಅವರು ಪ್ರಮುಖರು ಎನ್ನಬಹುದು.  


ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು.  ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ.  ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ.  ಇದರಿಂದ ಗೊರೂರರ ವಾಙ್ಮಯಕ್ಕೆ ಪ್ರಾದೇಶಿಕ ಸ್ವರೂಪ ಪ್ರಾಪ್ತವಾಗಿದ್ದರೂ ಅವರು ಕೊಡುವ ಜೀವನ ಚಿತ್ರಣ ಪ್ರಾದೇಶಿಕವಾಗಿರುವಂತೆ ಪ್ರಾತಿನಿಧಿಕವೂ ಆಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.


ಗಾಂಧೀವಾದಿ ಗೊರೂರರ ಜಾನಪದ ಪ್ರಜ್ಞೆ ಅದ್ಭುತವಾದುದು.  ಅವರು ಹೇಳುತ್ತಾರೆ:  “ನಾನು ಸಾಹಿತಿಗಿಂತ ಹೆಚ್ಚಾಗಿ ಜನಸಾಮಾನ್ಯರ ಮನುಷ್ಯ”, ಇದು ಅವರ ನಂಬಿಕೆ:  “ಜಾನಪದ ಗುಣಗಳನ್ನೂ, ಶಕ್ತಿಯನ್ನೂ ಹೆಚ್ಚು ಹೆಚ್ಚು ನೋಡಿದಂತೆ, ಭಾರತವನ್ನು ಆಧುನಿಕ ನಾಗರೀಕತೆಯ ಸರ್ವನಾಶದಿಂದ ತಪ್ಪಿಸಬಲ್ಲಂತದ್ದು  ಜಾನಪದವೊಂದೆ ಎಂಬ ನಂಬಿಕೆ ದೃಢವಾಗುತ್ತದೆ”. ಈ ಜಾನಪದ ಮತ್ತು ಜನಪರ ದೃಷ್ಟಿಯ ಹಿನ್ನೆಲೆಯಲ್ಲಿ ಗೊರೂರರ ಹಾಸ್ಯಪ್ರಜ್ಞೆ ಯಶಸ್ವಿಯಾಗಿ ಕೆಲಸ ಮಾಡಿದೆ.


ಗೊರೂರರ ಬರವಣಿಗೆಯಲ್ಲಿ ಕಲೆಯ ಪ್ರಯತ್ನ ಕಾಣುವುದಿಲ್ಲ.  ಯಾವುದೇ ತಂತ್ರದ ಪ್ರಯೋಗವಾಗಲಿ, ಸಂಕೇತ ಪ್ರತೀಕ ಪ್ರತಿಮೆಗಳ ನಿರ್ಮಾಣವಾಗಲಿ ಅವರ ಕೃತಿಗಳಲ್ಲಿ ಗೋಚರಿಸುವುದಿಲ್ಲ.  ತಾವು ಕಂಡುಂಡದನ್ನು ಗೊರೂರರು ಸಹಜವಾಗಿ, ಸಲೀಸಾಗಿ ಆಕರ್ಷಕವಾಗಿ ಹೇಳಿಕೊಂಡು ಹೋಗುತ್ತಾರೆ.  


ಗೊರೂರರ ಪ್ರಬಂಧಗಳನ್ನು ಮೊದಲು ಲಕ್ಷಿಸಬಹುದು.  ‘ಹಳ್ಳಿಯ ಚಿತ್ರಗಳು’, ‘ಗರುಡಗಂಬದ ದಾಸಯ್ಯ’, ‘ನಮ್ಮ ಊರಿನ ರಸಿಕರು’, ‘ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು’, ‘ಕಥೆಗಳು ಮತ್ತು ವಿನೋದ ಚಿತ್ರಗಳು’, ‘ಬೆಸ್ತರ ಕರಿಯ’, ‘ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ – ಈ ಸಂಕಲನಗಳಲ್ಲಿನ  ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ.  ಆದ್ದರಿಂದ ಗೊರೂರರ ಪ್ರಬಂಧಗಳು, ‘ಪ್ರಬಂಧ’ ಎಂಬ  ಶಬ್ದದ  ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ.


ಗೊರೂರರು ತಮ್ಮ ಬರಹಗಳಲ್ಲಿ ಈಗ ಕಾಣಸಿಗದ ಅಥವಾ ತ್ವರಿತವಾಗಿ ಮರೆಯಾಗುತ್ತಿರುವ ಹಳ್ಳಿಯ ಬದುಕನ್ನು ಅದರ ಎಲ್ಲ ಮುಖಗಳೊಡನೆ ಚಿತ್ರಿಸುವಲ್ಲಿ ಸಫಲರಾಗಿದ್ದಾರೆ.  ಗ್ರಾಮೀಣ ಜೀವನದಲ್ಲಿ ಅವರು ಒಂದಾಗಿ ಬಾಳಿದ್ದರಿಂದ ಇದು ಸಾಧ್ಯವಾಗಿದೆ.  ಅವರ ಕೃತಿಗಳಲ್ಲಿ ಕಂಡುಬರುವ ಪಾತ್ರ ವೈವಿಧ್ಯ ಅಪಾರವಾದುದು; ಅಲ್ಲಿ ಗ್ರಾಮದ ಎಲ್ಲ ವೃತ್ತಿಗಳ, ಎಲ್ಲ ಜಾತಿಗಳ ಜನರೂ ಇದ್ದಾರೆ – ಹಾರುವರಿಂದ ಹರಿಜನರತನಕ.  (‘ನಮ್ಮ ಎಮ್ಮೆಗೆ ಮಾತು ತಿಳಿಯುವುದೇ?’ ಎಂಬ ಪ್ರಬಂಧದಲ್ಲಿ ಪ್ರಾಣಿ ಪಾತ್ರವೂ ಉಂಟು.)  ಆದರೆ ಜಾತಿ-ಮತ-ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಕೆಲವು ಸೂತ್ರಗಳನ್ನು ಗೊರೂರರು ಗುರುತಿಸಿ, ಅವುಗಳಿಗೆ ಒತ್ತುಕೊಡುವುದರ ಮೂಲಕ ಸಾಮರಸ್ಯಯುತವಾದ ಒಂದು ಸಮಷ್ಟಿಯ ಚಿತ್ರವನ್ನು ಮೂಡಿಸುತ್ತಾರೆ.  ಅವರ ಲೆಕ್ಕಣಿ ಚಲನ ಛಾಯ ಬಿಂಬಗ್ರಾಹಿಯೂ ಆಗಿ, ಗ್ರಾಮಜೀವನದಲ್ಲಿ ಮಹತ್ವದ ಪಾತ್ರವಹಿಸುವ ಉತ್ಸವಗಳು, ಹಬ್ಬ ಹರಿದಿನಗಳು, ಜನಪದ ಕಲೆಗಳು, ಜನತೆಯಲ್ಲಿ ರೂಢವಾಗಿರುವ ಆಚಾರ ವಿಚಾರ, ನಂಬಿಕೆ ನಡಾವಳಿಗಳು ಎಲ್ಲವನ್ನೂ ಯಥಾವತ್ತಾಗಿ, ಸಜೀವವಾಗಿ ಸೆರೆಹಿಡಿದಿವೆ.  ಗ್ರಾಮೀಣ ಸಂಸ್ಕೃತಿಯ ವಿಶ್ವರೂಪವನ್ನೇ ಅಲ್ಲಿ ಕಾಣಬಹುದು.  “ಗೊರೂರರ ಕೃತಿಗಳು ಬರಬರುತ್ತ ಹಳ್ಳಿಗಳ ಮಹಾ ಭಾರತಗಳೇ ಆಗುತ್ತಿವೆ” ಎಂಬ ವಿ.ಕೃ. ಗೋಕಾಕರ ಮಾತೊಂದು ಉಲ್ಲೇಖನೀಯವಾಗಿದೆ.


ನಾಗರಿಕರು ಶುಷ್ಕವೆಂದು ಭಾವಿಸುವ ಜನಪದ ಜೀವನದಲ್ಲಿ ಎಂತಹ ಸ್ವಾರಸ್ಯವಿದೆ, ಚೆಲುವಿದೆ ಎಂಬುದನ್ನು, ಸಾಮಾನ್ಯ ಜನ ಎಂತಹ ರಸಿಕರೆಂಬುದನ್ನು ಗೊರೂರರು ತಮ್ಮ ಬರಹಗಳಲ್ಲಿ ಎತ್ತಿ ತೋರಿಸಿದ್ದಾರೆ.  ದೈನಂದಿನ ಬದುಕಿನ ಸಾಮಾನ್ಯ ಘಟನೆಗಳಲ್ಲಿ ಮತ್ತು ಸಂಗತಿಗಳಲ್ಲಿ ಹುದುಗಿರುವ ವಿಶೇಷತೆಯನ್ನು ಬಣ್ಣಿಸಿದ್ದಾರೆ.  ಅವರು ಎಲ್ಲವನ್ನೂ, ಎಲ್ಲರನ್ನೂ ಅವಲೋಕಿಸುವುದು ಹಾಸ್ಯ ಕಣ್ಣಿನಿಂದ.  


ಗೊರೂರರ ಹಾಸ್ಯ ಹೇಗೆ ನಿರರ್ಗಳವೋ ಹಾಗೆ ನಿರ್ಮಲವೂ ಹೌದು.  ಅದರ ಹಿಂದೆ ಆಕ್ರೋಶವಿಲ್ಲ, ಸಿನಿಕತನವಿಲ್ಲ’ ಸಹಾನುಭೂತಿಯಿದೆ, ಮಾನವೀಯ ಅಂತಃಕರಣವಿದೆ.   ಜೀವನವನ್ನೂ, ಜನವನ್ನೂ ಪ್ರೀತಿಸುವ ಪ್ರವೃತ್ತಿ ಗೊರೂರರದು.  ಆದರೆ ಎಲ್ಲ ವರ್ಗದ ಜನರಲ್ಲೂ ಮನೆ ಮಾಡಿಕೊಂಡಿರುವ ಲೋಪದೋಷಗಳನ್ನೂ, ಅವಗುಣಗಳನ್ನೂ ಅವರು ವಸ್ತುನಿಷ್ಟವಾಗಿ ನೋಡಿ, ಯಾರ ಮನಸ್ಸಿಗೂ ನೋವಾಗದಂತೆ ಹಾಸ್ಯ ವಿಡಂಬನೆಗೆ ಗುರಿಮಾಡಬಲ್ಲರು; ತನ್ಮೂಲಕ ಆ ಅಂಕುಡೊಂಕುಗಳ ತಿದ್ದುಪಡಿಗೆ ನೆರವಾಗಬಲ್ಲರು.  ಗೊರೂರರ ಗೇಲಿಗೆ ಅವರ ಜಾತಿಯ ಜನ ಕೂಡ ಹೊರಗಲ್ಲ ಎಂಬುದು ಮಹತ್ವದ ಸಂಗತಿ.  ಉದಾಹರಣೆಗೆ “ನಮ್ಮಲ್ಲಿ ಒಬ್ಬೊಬ್ಬರು ಒಂದೊಂದು ಕಸುಬನ್ನು ಆರಿಸಿಕೊಳ್ಳುವಂತೆ ಕೆಲವರು ಮಡಿಯನ್ನೇ ಕಸುಬಾಗಿ ಆರಿಸಿಕೊಂಡಿದ್ದಾರೆ” ಎಂಬ ಕರ್ಮಠ ವಿಡಂಬನವನ್ನು ಗಮನಿಸಬಹುದು.  ನಾಮಧಾರಣ ಪ್ರಕರಣವನ್ನು ಕುರಿತು “ಇದು ಅಯ್ಯಂಗಾರಿಗಳಿಗೆ ಮೊಹರಂ” ಎಂಬ ಟೀಕೆ.  ಅಷ್ಟೇಕೆ ಗೊರೂರರು ತಮ್ಮನ್ನು ತಾವೇ ಗೇಲಿಗೆ ಒಳಗುಮಾಡಿಕೊಳ್ಳಬಲ್ಲರು.  “ನಾನು ಗರುಡಗಂಬವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದುದನ್ನು ಜನರು ಕಂಡು, ಈ ಚಿತ್ರವನ್ನು ನೋಡಿ:  ‘ಇವನಿಗೆ ಜೋಳಿಗೆ, ಜಾಗಟೆ ಇಲ್ಲ.  ಆದರೂ ಇವನೂ ದಾಸಯ್ಯನೇ ಸಂದೇಹವಿಲ್ಲ’ ಎಂದು ಯೋಚಿಸಿದ್ದರು.    ಈ ಬಗೆಯ ನಿರ್ಲಿಪ್ತತೆ ಎಲ್ಲರಲ್ಲೂ ಇರುವುದಿಲ್ಲ.  ‘ಆಚಾರ ಕೆಟ್ಟರೂ ಆಕಾರ ಕೆಡಬಾರದು’,  ‘ಹಾರುವಯ್ಯ ಹಜಾಮನಾದುದು’ ಮುಂತಾದ ಪ್ರಬಂಧಗಳು ಯಾರನ್ನೂ ಗಹಗಹಿಸುವಂತೆ ಮಾಡಬಲ್ಲುವು.


ಗೊರೂರರ ಹಾಸ್ಯಮನೋಧರ್ಮದ ವ್ಯಕ್ತಿತ್ವದಲ್ಲಿ ಬಾಳಿನ ಬಗೆಗೆ ಉತ್ಸಾಹವಿದೆ, ನಿಷ್ಠೆಯಿದೆ;  ಅವರ ಬರಹಗಳು ಈ ಗುಣಗಳನ್ನು ಓದುಗರಲ್ಲೂ ಪ್ರೇರಿಸುತ್ತವೆ.  “ಬೈಲಹಳ್ಳಿ ಸರ್ವೆ’ಯ ಕಥೆಯಲ್ಲಿ, ಸರ್ವೆ ಮುಗಿದ ಮೇಲೆ ಊರಿಗೆ ಹೋದ ಮೋಜಿನಿದಾರರು ನಾಣಿಗೆ ಬರೆದ ಪತ್ರದಲ್ಲಿ ಕೊನೆಯಲ್ಲಿ ಹೀಗೆನ್ನುತ್ತಾರೆ:  “ನನ್ನ ಇಷ್ಟು ವರ್ಷದ ಅನುಭವದಲ್ಲಿ ನೂರಾರು ಹಳ್ಳಿಗಳನ್ನು ನೋಡಿದ್ದೇನೆ, ಅಳೆದಿದ್ದೇನೆ.  ಎಲ್ಲಾ ಕಡೆಯೂ ಒಂದೇ ಸಮ, ಒಂದೇ ಗೋಳು, ಒಂದೇ ದಾರಿದ್ರ್ಯ, ಒಂದೇ ಕೊಳಕು, ಅಜ್ಞಾನ, ಬೈಲಹಳ್ಳಿಯಲ್ಲೂ ಅದೇ ಅಜ್ಞಾನ, ಅದೇ ಗೋಳು.  ಆದರೆ ನಿಮ್ಮ ಉತ್ಸಾಹದಿಂದ ಆ ಗೋಳು ತಲೆ ತಗ್ಗಿಸಿತು.  ಅಳುವುದಕ್ಕೆ ಸಾವಿರ ಕಾರಣವಿದ್ದೂ ನಗುವುದಕ್ಕೆ ಒಂದು ಕಾರಣವಿದ್ದರೆ ಆ ಕಾರಣವನ್ನೇ ನೀವು ಬಲಪಡಿಸಿ ನಗುತ್ತಿದ್ದೀರಿ.  ನೋವು ಗೋಳುಗಳ ಹಿಂದೆ ಹೊಂಚುಹಾಕುತ್ತಿರುವ ನಗೆಯನ್ನು ಹಿಡಿಯುವುದೇ ಜೀವನದ ತಿರುಳು.  ಅದೇ ನಮ್ಮ ಮುಂದಲ ಉತ್ಸಾಹಕ್ಕೆ ಕಾರಣ.”  ಇದು ಗೊರೂರರ ನಿಲುವೂ ಹೌದು.  


‘ನಮ್ಮ ಊರಿನ ರಸಿಕರು’ ಗೊರೂರರ ಪ್ರಬಂಧ ಸಮುದಾಯದಲ್ಲಿ ಒಂದು ವಿಶಿಷ್ಟ ಕೃತಿ.  ಇದನ್ನು ‘ಚಿತ್ರ ಕಾದಂಬರಿ’ ಎಂದು ಕರೆಯಲಾಗಿದೆ.  “ಈ ಕೃತಿಯಲ್ಲಿ ಬರುವ ವ್ಯಕ್ತಿಗಳು ಬಿಡಿಬಿಡಿಯಾಗಿ ಕಂಡರೂ ಅವರೆಲ್ಲರೂ ವಿಶಿಷ್ಟ ಜೀವನದ ಪರಸ್ಪರ ಸಂಬಂಧವುಳ್ಳ ಗ್ರಾಮ ಸಮಾಜದ ಅವಯವಗಳಾಗಿ” ಚಿತ್ರಿತರಾಗಿದ್ದಾರೆ.  ಇದರಲ್ಲಿ ಬರುವ ಶಾಲು ಸಾಬಿಯ ಪಾತ್ರ ಮರೆಯಲಾಗದ್ದು.  


‘ಹೇಮಾವತಿಯ ತೀರದಲ್ಲಿ’ ಗೊರೂರರ ಅತ್ಯುತ್ತಮ ಪ್ರಬಂಧಗಳಲ್ಲೊಂದು.  ಇದು ‘ರಮ್ಯ ಚಿತ್ರಗಳ ಒಂದು ಚಿತ್ರಶಾಲೆ’.  ಅದರ ಪ್ರಾರಂಭವಿದು:  “ಹೇಮಾವತಿ ನದಿಯು ನಮ್ಮೂರ ಉಸಿರು.  ನದಿಯ ದಡದಲ್ಲಿ ನಿಂತುಕೊಂಡು ನೋಡಿದರೆ ನದಿ ನಮ್ಮೂರ ಬಳಿ ಇರುವಷ್ಟು ಸುಂದರವಾಗಿ, ಸೊಗಸಾಗಿ ಮತ್ತೆಲ್ಲೂ ಇಲ್ಲವೆಂದು ಯಾರಿಗಾದರೂ ತೋರುವುದು.  ನರಸಿಂಹಸ್ವಾಮಿ ದೇವಸ್ಥಾನದ ಮುಂದುಗಡೆಯಿಂದ ಎಡಗಡೆಯೂ, ಬಲಗಡೆಯೂ ನೋಡಿದರೆ ನೂರಾರು ತೋಪುಗಳ ಗೊಂಚಲುಗಳು ಕಣ್ಣಿಗೆ ವಿಶ್ರಾಂತಿಯನ್ನು ಕೊಡುವುವು.  ನದಿಯ ಎರಡು ದಡಗಳಲ್ಲೂ ಮರದ ಕೊಂಬೆಗಳು ನದಿಯ ಮೇಲೆ ಬಾಗಿದ್ದು ನೀರನ್ನು ಮುತ್ತಿಡುತ್ತಾ ನದಿಯ ರೆಪ್ಪೆಗಳಂತೆ ಕಾಣುವುವು.  ನದಿಯಿಂದ ಮೇಲೆ ಪಶ್ಚಿಮಕ್ಕೆ ಒಂದು ಮೈಲಿ ಹೋದರೆ ಈಶ್ವರನನ್ನು ತಪಸ್ಸಿಗೆ ಆಕರ್ಷಿಸುವಷ್ಟು ರಮಣೀಯವೂ, ಶಾಂತವೂ ಆದ ಸಂಗಮ ಮತ್ತು ತೋಪು.  ಹೇಮಾವತೀ ನದಿಯು ನಮ್ಮ ಪ್ರಾಂತಕ್ಕೇ ಜೀವವನ್ನು ಕೊಡುವ ಜೀವನಾಡಿ.  ಅದರ ಸ್ಪರ್ಶದಿಂದ ಪವಿತ್ರವೂ, ಚೆನ್ನೂ ಆದ ನಮ್ಮ ನಾಡು ದೇವಲೋಕದ ನಂದನವನಕ್ಕೆ ಎಣೆಯಾದುದು”.  “ಹೇಮಾವತಿಯ ಬಣ್ಣನೆ ಹೀಗೆಯೇ ಕಾವ್ಯಗಂಧಿಯಾಗಿ ಮುಂಬರಿಯುತ್ತದೆ; ಒಟ್ಟಿನಲ್ಲಿ ಪ್ರಬಂಧ ಒಂದು ನೀಳ ಭಾವಗೀತೆಯಾಗಿದೆ.  ಗೊರೂರರು ಯಾವುದೇ ಒಂದು ಗ್ರಾಮೀಣ ಅಥವಾ ನಾಗರಿಕ ಪರಿಸರವನ್ನಾಗಲಿ ಒಳಗಣ್ಣಿಗೆ ಪರಿಸ್ಫುಟವಾಗುವಂತೆ ವರ್ಣಿಸಬಲ್ಲರು.  ಆ ವರ್ಣನೆಗಳಲ್ಲಿ ಎಷ್ಟೋ ಕಡೆ ಅವರ ಕವಿಮನೋವೃತ್ತಿಯ ವಿಲಾಸ ಕಾಣಿಸುತ್ತದೆ.  ಕನ್ಯಾಕುಮಾರಿಯ ಕಡಲು, ಬಿಂದಿಗಮ್ಮನ ಜಾತ್ರೆ, ಶಿವರಾತ್ರಿ ಇತ್ಯಾದಿಗಳ ವರ್ಣನೆಗಳು ಕಾವ್ಯ ಪ್ರತಿಭೆಯ ಸಮೀಚೀನ ನಿದರ್ಶನಗಳು.


ನಾಗರೀಕತೆಯ ಪ್ರಭಾವದಿಂದ ನಾವು ಅಮೂಲ್ಯವಾದುದನ್ನೆನನ್ನೋ ಕಳೆದುಕೊಂಡೆವು ಎಂಬ ವಿಷಣ್ಣತೆ ಗೊರೂರರ ಪ್ರಬಂಧಗಳಲ್ಲಿ ವ್ಯಕ್ತವಾಗುತ್ತದೆ.  ಎಂದರೆ ಹಳೆಯ ಅನಿಷ್ಟ ವ್ಯವಸ್ಥೆ ಯಥಾವತ್ತಾಗಿ ಉಳಿದು ಬರಬೇಕಿತ್ತು ಎಂಬುದು ಗೊರೂರರ ಅಭಿಪ್ರಾಯವಲ್ಲ.  ವಾಸ್ತವವಾಗಿ ಅವರದು ಪ್ರಗತಿಪರ ಧೋರಣೆ;  ಹಳತು-ಹೊಸತುಗಳ ಸಮನ್ವಯದಲ್ಲಿ ವಿಶ್ವಾಸವುಳ್ಳದ್ದು.  ನಾಗರೀಕತೆ, ವಿಜ್ಞಾನಗಳು ಮನುಕುಲಕ್ಕೆ ಲಾಭದಾಯಕವಾಗಿದ್ದರೂ – ಜನಜೀವನದ ಶಾಂತಿ, ಸಮಾಧಾನ ಸೌಮನಸ್ಯಗಳನ್ನು ಅಳಿಸಿವೆ.  ಕೆಲವು ಮೌಲ್ಯಗಳಿಗೆ ಮಾರಕವಾಗಿವೆ ಎಂಬುದನ್ನು ಯಾರೂ ಒಪ್ಪಬೇಕು.  ‘ಸೇತುವೆ’ ಎಂಬ ಪ್ರಬಂಧದ ಅಂತ್ಯದಲ್ಲಿ ಗೊರೂರರು ತೆಗೆಯುವ ಉದ್ಗಾರ ಅರ್ಥವತ್ತಾಗಿದೆ:  “ಅದರ (ನದಿಯ) ಮೇಲೆ ಬಿದ್ದ ಸೇತುವೆ ಅದಕ್ಕೂ ನಮಗೂ ನಡುವೆ ಬಿದ್ದಂತೆ ತೋರುತ್ತಿದೆ”.  ‘ನಮ್ಮ ಹೊಳೆಯ ಒಂದು ಅನುಭವ’ದ ಕಡೆಯಲ್ಲಿ ಬರುವ “ಈಗ ಹನುಮನು ಇಲ್ಲ’ ಸೇತುವೆ ಇದೆ ಎಂಬ ಮಾತು ಕೂಡಾ ಧ್ವನಿಪೂರ್ಣ.  ಹನುಮ ಬಹಳಷ್ಟನ್ನು ಸಂಕೇತಿಸುತ್ತಾನೆ.  ಗೊರೂರರ ಕೃತಿಗಳನ್ನು ಓದಿದ ಮೇಲೆ, ವಾಚಕರಲ್ಲೂ ಒಂದು ನಷ್ಟದ ಭಾವನೆ ಹುಟ್ಟದಿರುವುದಿಲ್ಲ.


‘ಗರುಡಗಂಬದ ದಾಸಯ್ಯ’ ಕೃತಿಯ ಮುನ್ನುಡಿಯಲ್ಲಿ ದ.ರಾ ಬೇಂದ್ರೆ ಹೀಗೆಂದಿದ್ದಾರೆ.  “ಒಬ್ಬ ಅರಸುಗಳೆ, ಹಜಾಮರೆ, ಹಾರುವರೆ, ತುರುಕರೆ, ದಾಸಯ್ಯಗಳೆ, ಬಯಲಾಟದವರೆ, ಸುಭೇಧಾರರೆ, ಶಾನುಭೋಗರೆ, ಹೊಲೆಯರೆ – ಇವರೆಲ್ಲರನ್ನೂ ಒಂದು ಮಾಲೆಯಲ್ಲಿ ಪೋಣಿಸಿದ ವಿಕಟ ಕವಿತ್ವವು ಪ್ರಶಂಸನೀಯವಾದುದೆಂದು ಯಾರು ಹೇಳಲಿಕ್ಕಿಲ್ಲ?”  ವರಕವಿಗಳ ಈ ಮಾತು ಗೊರೂರರ ಸಾಹಿತ್ಯಕ್ಕೆಲ್ಲಾ ಅನ್ವಯಿಸಬಹುದಾದ ಹೇಳಿಕೆಯಂತಿದೆ.


ಗೊರೂರರ ಕಾದಂಬರಿಗಳು ನಾಲ್ಕು: ‘ಹೇಮಾವತಿ’, ‘ಪುನರ್ಜನ್ಮ’, ‘ಮೆರವಣಿಗೆ’ ಮತ್ತು ‘ಊರ್ವಶಿ’.  ನಾಲ್ಕೂ ಒಳ್ಳೆಯ ಕಾದಂಬರಿಗಳೇ.  ಸಂಪ್ರದಾಯ ಶರಣರಾದ ಗ್ರಾಮೀಣ ಸಮಾಜದಲ್ಲಿ ಸುಧಾರಣೆಯ ಗಾಳಿ ಬೀಸಿದ ಪರಿಯನ್ನು ಚಿತ್ರಿಸುತ್ತದೆ ‘ಹೇಮಾವತಿ’.   ನೂತನ ವಿಚಾರಗಳಿಗೆ ಮನತೆರೆದ ಯುವಕರು ಹಳ್ಳಿಯಲ್ಲಿ ಹೇಗೆ ಹೊಸ ವಾತಾವರಣವನ್ನು ಸೃಜಿಸಿದರು ಎಂಬುದನ್ನು ಹೇಳುತ್ತದೆ.  ಪಂಚಮರನ್ನು ಉದ್ಧರಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಗೊರೂರರು ಇದರಲ್ಲಿ ಎತ್ತಿ, ಉತ್ತರವನ್ನೂ ಕೊಟ್ಟಿದ್ದಾರೆ.  ಅವರನ್ನು ಪ್ರೀತಿ, ಅನುಕಂಪಗಳಿಂದ ಕಾಣಬೇಕು, ಅವರಿಗೆ ಶಿಕ್ಷಣ ಕೊಡಬೇಕು, ಅರೋಗ್ಯ ನಿಯಮಗಳನ್ನು ಹೇಳಿಕೊಡಬೇಕು.  ಈ ಪರಿವರ್ತನೆ ಒಂದೆರಡು ದಿನಗಳಲ್ಲಿ ಆಗುವಂಥದ್ದಲ್ಲ; ಎಲ್ಲರ ಮನವೊಲಿಸಿ, ನಿಧಾನವಾಗಿ ಸಾಧಿಸಬೇಕಾದದ್ದು.  


‘ಪುನರ್ಜನ್ಮ’ ಸ್ವಾತಂತ್ರ್ಯ ಸಂಗ್ರಾಮ ಕಾಲದ ಒಂದು ಆದರ್ಶಪೂರ್ಣ ಕತೆಯನ್ನು ಭಿತ್ತರಿಸುತ್ತದೆ.  ನಮ್ಮ ಸ್ವಾತಂತ್ರ್ಯ ಎಂಥಹ ತಪಸ್ಸಿನ ಮತ್ತು ಶ್ರಮದ ಫಲ ಎಂಬುದನ್ನು ಮನಗಾಣಿಸುವ ಕಾದಂಬರಿ.  


‘ಮೆರವಣಿಗೆ’ ಒಬ್ಬ ವಿಮರ್ಶಕರ ಪ್ರಕಾರ “ಇದು ಕತೆಯಲ್ಲ, ಕಾದಂಬರಿಯಲ್ಲ, ಪ್ರಬಂಧವೂ ಅಲ್ಲ, ಸಾಚಾ ಅನುಭವಗಳ ಮೆರವಣಿಗೆ”.  ಇದರಲ್ಲಿ ಈಗಿನ ಮಠಾಧಿಪತಿಗಳ ಮೇಲೆ ಗೊರೂರರು ಮಾಡಿರುವ ಆಕ್ರಮಣ ಅವಶ್ಯವಾಗಿ ಗಮನಿಸಬೇಕಾದುದು:  “ಕಾಲಾನುಕಾಲಕ್ಕೆ ಧರ್ಮವನ್ನೂ ಮತಪದ್ಧತಿಗಳನ್ನೂ ಬದಲಾಯಿಸಿ, ಸಮಾಜವನ್ನು ಆಧುನಿಕವಾಗಿ ಮಾಡುತ್ತಿದ್ದ ಆ ಪೂರ್ವದ ಋಷಿಗಳೆಲ್ಲಿ?  ಈಗಿನ ಈ ಮಠಾಧಿಪತಿಗಳಾದರೂ ಏನು ಮಾಡುತ್ತಿದ್ದಾರೆ; ಸಂಸಾರಿಕರಂತೆ ತಾವೂ ಅರಮನೆಗಳ ಮುಂದೆಯೂ ಅಧಿಕಾರಿಗಳ ಮುಂದೆಯೂ ಬಾಲ ಬಡಿಯುತ್ತಾ ಶಿಷ್ಯರೆನಿಸಿಕೊಳ್ಳುವ ಕುರಿಗಳ ತಲೆ ಒಡೆದು ಒಂದೊಂದು ಆಳು ಎತ್ತರದ ಕೊಳಗದಪ್ಪಲೆಗಳಲ್ಲಿ  ಪಾಯಸ ಜಿಲೇಬಿ ಮಾಡಿಸಿ ಮೋಟಾರಿನಲ್ಲಿ ತಿರುಗುತ್ತಾ ತಮ್ಮ ಮೆರವಣಿಗೆಗಳನ್ನು ಮಾಡಿಕೊಳ್ಳುವ ಈ ಮಠದ ಪಾಳಯಗಾರರು, ಆಧುನಿಕ ಜಗತ್ತಿನ ಬದಲಾಯಿಸಿದ ಪರಿಸ್ಥಿತಿಗಳು ಎದುರಿಗೆ ಎದ್ದು ನಿಂತಾಗ ಯಾವ ಹಳೆಯ ಓಲೆಗರಿಯ ಧೂಳನ್ನು ಕೊಡುವುತ್ತಿದ್ದಾರೆ?... ಈ ಸಮಾಜದ ಅಸ್ತಿತ್ವ ಉಳಿಯಬೇಕಾದರೆ ನಾವು ಅವಲಂಬಿಸಬೇಕಾದ ಆಧುನಿಕ ಮಾರ್ಗಗಳಾವುವು? ತ್ಯಜಿಸಬೇಕಾದ ಪ್ರಾಚೀನ ರೋಗಗಳಾವುವು?  ಧರ್ಮವನ್ನೂ ವಿಜ್ಞಾನವನ್ನೂ ಬೆರೆಸುವುದು ಹೇಗೆ?  ಇವುಗಳನ್ನೆಲ್ಲಾ ಈ ಗುರುಗಳು ಎನಿಸಿಕೊಳ್ಳುವವರು ತಮ್ಮ ಮಠಗಳನ್ನೇ ಪ್ರಯೋಗ ಕ್ಷೇತ್ರಗಳನ್ನಾಗಿ ಮಾಡಿಕೊಂಡು ತೋರಿಸಬೇಡವೆ?  ಅದು ಬಿಟ್ಟು ಏನು ಬರಲಿ ಏನು ನಡೆಯಲಿ?  ಯಾವ ಪ್ರಶ್ನೆ ಏಳಲಿ?  ಎಲ್ಲದಕ್ಕೂ ಸಾವಿರ ವರುಷದ ಕೆಳಗೆ ಹೇಳಿದ ಬುಕ್ಕಿನಲ್ಲಿ ಏನಿದೆ ಅದಕ್ಕೆ ಸರಿಹೋಗುತ್ತದೆಯೋ, ಅದಕ್ಕೆ ಸರಿ ಹೋಗದಿದ್ದರೆ ಅದಕ್ಕೆ ಜಗತ್ತಿನಲ್ಲಿ ಜಾಗವೇ ಇಲ್ಲ”.  ಇಲ್ಲಿ ಪ್ರಕಟವಾಗಿರುವ ವೈಚಾರಿಕ ಮನೋಭಾವ ಮತ್ತು ವಿವೇಕಪರತೆ ಸ್ತುತ್ಯವಾಗಿವೆ.


ಕೆಟ್ಟಗಳಿಗೆಯೊಂದರಲ್ಲಿ, ತನ್ನ ತಪ್ಪೇನೂ ಇಲ್ಲದೆ, ಜಾರಿದ ಹೆಣ್ಣೊಬ್ಬಳು ಮುಂದೆ ಎಚ್ಚತ್ತು ಆತ್ಮೋದ್ಧಾರ ಮಾಡಿಕೊಂಡು ಸಮಾಜಕ್ಕೂ ಸೇವೆ ಸಲ್ಲಿಸಿದ ಕರುಣಾಜನಕ ಕಥೆ ‘ಊರ್ವಶಿ’ಯಲ್ಲಿದೆ.  ಇದನ್ನು ಒಬ್ಬ ವಿಮರ್ಶಕರು ಕನ್ನಡದ ‘ಪುನರುತ್ಥಾನ’ ಎಂದು ಕರೆದಿದ್ದಾರೆ.


‘ವೈಯಾರಿ’, ‘ಶಿವರಾತ್ರಿ’, ‘ಉಸಬು’, ‘ಗೋಪುರದ ಬಾಗಿಲು’, ‘ಕಮ್ಮಾರ ವೀರ ಭದ್ರಾಚಾರಿ’, ‘ಕನ್ಯಾಕುಮಾರಿ ಮತ್ತು ಇತರ ಕಥೆಗಳು’, ಇವು ಗೊರೂರರ ಕಥಾ ಸಂಗ್ರಹಗಳು.  ಹಳ್ಳಿಯ ಜೀವನ, ಪೇಟೆಯ ಜೀವನ ಎರಡಕ್ಕೂ ಸಂಬಂಧಿಸಿದ ಕತೆಗಳನ್ನು ಗೊರೂರರು ಬರೆದಿದ್ದಾರೆ.  ‘ಬೂತಯ್ಯನ ಮಗ ಅಯ್ಯು’ ಗೊರೂರರ ಶ್ರೇಷ್ಠತಮ ಕಥೆ.  ಸಂಕೀರ್ಣವಾದ ಅನುಭವವನ್ನು ತಾಳಿಕೊಂಡದ್ದು.  ಅದರಲ್ಲಿ ಮನುಷ್ಯ ಸ್ವಭಾವವನ್ನು ಲೇಖಕರು ಸತ್ವಯುತವಾಗಿ ವಿಶ್ಲೇಷಿಸಿದ್ದಾರೆ.  ದ್ವೇಷದ ನೆಲೆಯಲ್ಲಿ ಭೀಕರವಾಗಿ ಮೊದಲಾಗುವ ಕತೆ ಸ್ನೇಹದ ನೆಲೆಗೆ ಬೆಳೆದು ತಿಳಿಯಾಗಿ ಮುಗಿಯುತ್ತದೆ.  “ಮುಗ್ಧತೆಗೆ ಸೆರೆಯಾಗದ ಆದರ್ಶತ್ವ, ಸರಳೀಕರಣಕ್ಕೇ ಸೆರೆಯಾಗದ ವಾಸ್ತವಿಕತೆ, ಅನುಕಂಪವನ್ನು ಬಿಡದ ತಿಳಿಹಾಸ್ಯ, ಮಾನವ ಸ್ವಭಾವದಲ್ಲಿ ನೈಜವಾದ ಮತ್ತು ಉದಾರವಾದ ಆಸಕ್ತಿ-ಇವು ಅವರ ಕಥಾಸಾಹಿತ್ಯಕ್ಕೇ ಜೀವವನ್ನೂ ಬೆಲೆಯನ್ನೂ ತಂದಿವೆ.”


ಗೊರೂರರ ಪ್ರವಾಸ ಕಥನ, ‘ಅಮೆರಿಕದಲ್ಲಿ ಗೊರೂರು’ ಇದು ಅವರು ಮಾತ್ರ ಕೊಡಬಹುದಾದದ್ದು.  ಅಮೆರಿಕವನ್ನು ಕುರಿತ ಪ್ರವಾಸ ಕಥನಗಳು ನಮ್ಮಲ್ಲಿ ಅನೇಕ ಇವೆ; ಗೊರೂರರದು ಅವುಗಳಂತಲ್ಲ.  ಇಲ್ಲಿಯೂ ಅವರ ಹಾಸ್ಯಪ್ರಜ್ಞೆ ಮೇಲುಗೈಯಾಗಿದೆ.  ‘ಅಮೆರಿಕದಲ್ಲಿ ಗೊರೂರು’ ಅತ್ಯಂತ ಧ್ವನಿಪೂರ್ಣವಾದ ಶೀರ್ಷಿಕೆ.  ಅದು ಪೂರ್ವ ಪಶ್ಚಿಮಗಳನ್ನೂ ನಗರ ಗ್ರಾಮಗಳನ್ನೂ ಹಳತು ಹೊಸತನ್ನೂ ಸಂಕೇತಿಸುತ್ತದೆ.  ಅಮೆರಿಕದಲ್ಲಿ ಗೊರೂರು ಕಳೆದು ಹೋಗುವುದಿಲ್ಲ; ವಿವಿಧ ಸ್ತರಗಳಲ್ಲಿ ಮೈದೋರುತ್ತದೆ.  ಇದು ಈ ಪುಸ್ತಕದ ವಿಶೇಷ.”


ಗೊರೂರರ ಸಾಹಿತ್ಯಕ್ಕೊಂದು ಗಂಭೀರವಾದ ಮುಖವೂ ಉಂಟೆಂಬುದನ್ನು ನೆನಪಿನಲ್ಲಿಡಬೇಕು.  ಇದಕ್ಕೆ ಒಂದು ಸಣ್ಣ ನಿದರ್ಶನ ಕೊಡಬಹುದು.  ‘ನಮ್ಮ ಊರಿನ ರಸಿಕರು’ ಕೃತಿಯಲ್ಲಿ ಒಂದೆಡೆ ವೈದಿಕ ಬಾಲ ವಿಧವೆಯೊಬ್ಬಳ ವಿಷಯ ಬರುತ್ತದೆ.  ಅವಳಿಗೆ ಮನೆಯವರು ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿ, ಮೂಲೆ ಗುಂಪು ಮಾಡಿದ ಹೀನ ಪ್ರಕ್ರಿಯೆಗೆ ಒಬ್ಬ ಶೂದ್ರ ಆಳಿನ ಪ್ರತಿಕ್ರಿಯೆಯಿದು:  “ಅದ್ಯಾಕ ಬುದ್ಧಿ ಹನ್ನೊಂದು ವರ್ಷದ ಹಸುಗೂಸ್ಗೆ ಇನ್ನೊಂದು ಮದ್ವೆ ಮಾಡೋಕಾಗ್ದಿತ್ರ?”  ಇದು  ಗೊರೂರರ ನವೀನ ದೃಷ್ಟಿ ಮಾತ್ರವಲ್ಲದೆ, ಮೇಲುವರ್ಗದ ಸಂಪ್ರದಾಯ ಶಕಠತೆಗೂ ಕೆಳವರ್ಗದವರ ಮಾನವೀಯ ಧೋರಣೆಗೂ ಇರುವ ವೈರುಧ್ಯ ಕೂಡಾ ಇಲ್ಲಿ ಧ್ವನಿತವಾಗುತ್ತದೆ.    


‘ಸಾಹಿತ್ಯ ರಶ್ಮಿ’ ಗೊರೂರರ ಆಲೋಚನಶೀಲತೆಗೆ ಸ್ಪಷ್ಟಸಾಕ್ಷಿಯಾಗಿದೆ.  ಇದರಲ್ಲಿನ ಲೇಖನಗಳಲ್ಲಿ ಸಾಹಿತ್ಯ ಮಾತ್ರವಲ್ಲದೆ, ಶಿಲ್ಪಕಲೆ, ಶಿಕ್ಷಣ, ವೃತ್ತಪತ್ರಿಕೆ, ಜೀವನ ತತ್ವ ಮುಂತಾದ ಹಲವಾರು ವಿಷಯಗಳು ಚರ್ಚಿತವಾಗಿವೆ.  ಗೊರೂರರ ಬಹುಮುಖದ ಅಭಿರುಚಿ, ಪಾಂಡಿತ್ಯ, ವಿಮರ್ಶನ ಶಕ್ತಿಗಳು ಇಲ್ಲಿ ಅನಾವರಣಗೊಂಡಿವೆ.  


ಒಟ್ಟಿನಲ್ಲಿ ಕನ್ನಡಕ್ಕೆ ಗೊರೂರರ ಮುಖ್ಯವಾದ ಕೊಡುಗೆಯೇನು?  ಅದನ್ನು ಕುವೆಂಪು ಅವರ ನುಡಿಗಳಲ್ಲಿ ಹೀಗೆ ಸಂಗ್ರಹಿಸಬಹುದು: “ಚಾರ್ಲ್ಸ್ ಡಿಕನ್ಸ್, ಆಲಿವರ್ ಗೋಲ್ಡ್ ಸ್ಮಿತ್, ಎ.ಜಿ. ಗಾರ್ಡಿನರ್ ಮುಂತಾದ ಇಂಗ್ಲಿಷ್ ಲೇಖಕರ ಬರವಣಿಗೆಯನ್ನು ಓದಿ, ಅಲ್ಲಿನ ವಿವಿಧ ರೀತಿಯ ಹಾಸ್ಯವನ್ನು ಚಪ್ಪರಿಸಿದ್ದ ನಮಗೆ ಕನ್ನಡದಲ್ಲಿ ಅಂಥ ಹಾಸ್ಯದ ಅರಕೆ ದೊಡ್ಡ ಕೊರಗನ್ನೇ ಉಂಟುಮಾಡಿತ್ತು.  ಆ ಅರಕೆಯನ್ನು ಹೋಗಲಾಡಿಸಿದ ಕೆಲವೇ ಲೇಖಕರಲ್ಲಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರು ನಿಶ್ಚಯವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ...”


ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.  ಮತ್ತೊಬ್ಬ ಗೊರೂರರು ನಮ್ಮಲ್ಲಿಲ್ಲ; ಅವರು ಚಿತ್ರಿಸಿದಂಥ ಸಮಾಜವೂ ಈಗ ಉಳಿದಿಲ್ಲ.   ಆದರೆ ಅವರು ಉಳಿಸಿ ಹೋಗಿರುವ ಅನುಭವ ಶ್ರೇಷ್ಠತೆ ನಮಗೆ ಆಸ್ತಿಯಾಗಿ ಉಳಿದಿದೆ.    ಈ ಕನ್ನಡ ಶ್ರೇಷ್ಠರಿಗೆ ನಮ್ಮ ಗೌರವಪೂರ್ಣ ನಮನ.


(ಆಧಾರ:  ಸಿ. ಪಿ. ಕೃಷ್ಣಕುಮಾರ್ ಅವರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕುರಿತ ಲೇಖನ)



(ಆಕರ:  'ಕನ್ನಡ ಸಂಪದ')

ದೇ ಜವರೇಗೌಡ

  ದೇ ಜವರೇಗೌಡ ಅವರು ಬರಹಗಾರರಾಗಿ, ಉಪಕುಲಪತಿಗಳಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ. ದೇ ಜವರೇಗೌಡ ಅವರು ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ...